Friday 25 January 2008

ಅರಿವಿನ ಅಂತರಾಳ-ಕರ್ಮದ ಹೊರೆ

ಪ್ರಜಾವಾಣಿ ಇಂದ ಆರಿಸಿದ್ದು ಅರಿವಿನ ಅಂತರಾಳ
ಕರ್ಮದ ಹೊರೆ
ಮನುಷ್ಯನ ಅಸ್ತಿತ್ವವು ವಾಸ್ತವಿಕತೆಯಾಗುವುದು ಅವನ ಕರ್ಮಜೀವನದಿಂದ. ಒಂದು ಕರ್ಮವನ್ನು ಎಸಗದವನಲ್ಲಿ ಮಾನವೀಯ ಗುಣಗಳು ಎಷ್ಟೇ ಅಧಿಕವಿದ್ದರೂ ಅವನು ನೈಜ ಮನುಷ್ಯನಾಗುವುದಿಲ್ಲ. ಅದೊಂದು ಕಾಲ್ಪನಿಕ ಅಸ್ತಿತ್ವ ಮಾತ್ರ. ಪ್ರತಿಯೊಬ್ಬ ಮನುಷ್ಯನ ಅಸ್ತಿತ್ವವೂ ಅವನ ಚಟುವಟಿಕೆಗಳಾಗಿವೆ. ಅವುಗಳ ಗುಣಾವಗುಣಗಳನ್ನು ಅವಲಂಬಿಸಿಕೊಂಡು ಅವನ ಅಸ್ತಿತ್ವದ ಸೋಲು-ಗೆಲುವು ಇರುತ್ತದೆ. ಒಬ್ಬನ ಅಸ್ತಿತ್ವದ ಒಟ್ಟು ಮೊತ್ತವು ಅವನ ಕರ್ಮಲೋಕವಾಗಿದೆ. ಒಬ್ಬನ ಅಸ್ತಿತ್ವವನ್ನು ಇನ್ನೊಬ್ಬನಿಗೆ ವಹಿಸಿಕೊಳ್ಳಲು ಸಾಧ್ಯವಿಲ್ಲ. ಇಹಲೋಕದಲ್ಲೂ, ಪರಲೋಕದಲ್ಲೂ ವಸ್ತುಸ್ಠಿತಿ ಇದುವೇ ಆಗಿದೆ. ಆದರೆ ಇಹಲೋಕದಲ್ಲಿ ಕೆಲವರು ತಮ್ಮ ತಮ್ಮ ಭಾರವನ್ನು ಕೃತಕವಾಗಿ ಇತರರ ಮೇಲೆ ಹೇರಲು ಮತ್ತು ಇತರರ ಭಾರವನ್ನು ಹೊರಲು ಸಾಧ್ಯವಾಗಬಹುದು. ಇತರರು ಮಾಡಿದ ಸತ್ಕರ್ಮ ಅಥವಾ ದುಷ್ಕರ್ಮವನ್ನು ತಾನು ಮಾಡಿದ್ದೆಂದು ಹೇಳಲು ಮತ್ತು ಅದನ್ನು ಜನರು ನಂಬುವಂತೆ ಮಾಡಲು ಸಾಧ್ಯವಾಗಬಹುದು. ಇತರರ ತಪ್ಪಿಗೆ ಶಿಕ್ಷೆ ಅನುಭವಿಸಬಹುದು. ಇತರರ ಪುಣ್ಯಕ್ಕೆ ಪುರಸ್ಕಾರವನ್ನೂ ಪಡೆಯಬಹುದು. ಆದರೆ ಅದರಿಂದಾಗಿ ವಾಸ್ತವ ಜಗತ್ತಿನಲ್ಲಿ ಇತರರ ಕರ್ಮ ತನ್ನದಾಗದು. ತನ್ನ ಕರ್ಮವು ಇತರರದ್ದಾಗುವುದೂ ಅಸಾಧ್ಯ. ಇದನ್ನೇ ಪವಿತ್ರ ಕುರಾನ್ ಈ ರೀತಿ ಪ್ರತಿಪಾದಿಸಿದೆ.
ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊಣೆಯನ್ನು ಹೊರಲಾರನು. ಮನುಷ್ಯನ ಪಾಲಿಗೆ ಅವನು ಪರಿಶ್ರಮ ಪಟ್ಟದ್ದು ಮಾತ್ರವಿದೆ. ಅವನ ಪರಿಶ್ರಮವನ್ನು ಸಧ್ಯವೇ ಪರಿಶೀಲಿಸಲಾಗುವುದು. ತರುವಾಯ ಅವನ ಸಂಪೂರ್ಣ ಪ್ರತಿಫಲವನ್ನು ಕೊಡಲಾಗುವುದು.
ಮರಣಾನಂತರದ ಪರಲೋಕ ಜೀವನದಲ್ಲಿ ಈ ರೀತಿ ಕೃತಕವಾಗಿ ಅಸ್ತಿತ್ವಗಳನ್ನು ಬದಲಾಯಿಸಲಾಗದು. ಅವುಗಳ ರೂಪಾಂತರವೂ ಸಾಧ್ಯವಿಲ್ಲ. ಸತ್ತವನು ಪುನರುತ್ಥಾನಗೊಳ್ಳುವುದು ಸ್ವಂತ ಕರ್ಮಗಳ ವಾಸ್ತವಿಕತೆಗಳಂತಾಗಿರುವುದು. ಮುಖವಾಡಗಳು, ಆಡಂಬರಗಳಿಲ್ಲದೆ ಯಥಾರ್ಥ ರೂಪದ ಕರ್ಮಗಳ ಮುಂದೆ ಮನುಷ್ಯನು ನಿಂತಿರುವನು. ಈ ರೀತಿ ಕರ್ಮಗಳನ್ನು ಅಸಂದಿಗ್ಧವಾಗಿ ತಾನೇ ಗುರುತಿಸಿಕೊಂಡ ಬಳಿಕವೇ ಪ್ರತಿಯೊಬ್ಬ ವ್ಯಕ್ತಿಯ ಕರ್ಮ ಫಲವು ತೀರ್ಮಾನಗೊಳ್ಳುವುದು.
ಒಬ್ಬನ ಕರ್ಮದ ಭಾರವನ್ನು ಇನ್ನೊಬ್ಬನು ವಹಿಸಲು ಸಾಧ್ಯವಿಲ್ಲವೆಂಬುದು ಸಾಮಾನ್ಯ ಬುದ್ಧಿಗೆ ನಿಲುಕುವ ವಿಷಯ. ಉಚ್ಚರು, ಉನ್ನತರು, ಯಜಮಾನರು, ಪುರೋಹಿತರು, ಪುಣ್ಯ ಪುರುಷರು, ದೇವಚರರು, ಪ್ರವಾದಿಗಳು, ಸಂತರು ಯಾರೂ ಇತರರ ಭಾರವನ್ನು ವಹಿಸಲಾರರು. ವಶೀಲಿ, ಶಿಫಾರಸ್ಸು, ವರ್ಚಸ್ಸುಗಳ ಮೂಲಕ ಇನ್ನೊಬ್ಬನನ್ನು ಅವನ ಕರ್ಮಫಲವನ್ನು ಅನುಭವಿಸುವುದರಿಂದ ರಕ್ಷಿಸಲು ಸಾಧ್ಯವಿಲ್ಲ. ಇದು ಕುರಾನ್ ಪ್ರತಿಪಾದಿಸುವ ಕರ್ಮ ಫಲದ ಸಿದ್ಧಾಂತ. ಹಿಂದಿನ ಎಲ್ಲ ಧರ್ಮಗಳೂ ಅದನ್ನೇ ಪ್ರತಿಪಾದಿಸಿದ್ದವು ಎಂದು ಅದು ವಾದಿಸುತ್ತವೆ.
ಮನುಷ್ಯ ಒಂದು ನೈತಿಕ ಅಸ್ತಿತ್ವ, ಒಳಿತು-ಕೆಡುಕು ಪ್ರಜ್ನೆ ಅವನ ಅಂತರಾತ್ಮದಲ್ಲಿ ಲೀನವಾಗಿದೆ. ಅವನು ಮಾಡಿದ ಒಳಿತಿಗಾಗಲಿ, ಕೆಡುಕಿಗಾಗಲಿ ಅವನೇ ಜವಾಬ್ದಾರನಾಗಬೇಕಾದುದು ಬುದ್ಧಿಯ ಬೇಡಿಕೆ. ಬಿತ್ತಿದಂತೆ ಬೆಳೆ, ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಗಳ ತಾತ್ಪರ್ಯವೂ ಅದುವೇ. "ಅಣು ಗಾತ್ರದಷ್ಟು ಒಳಿತು ಮಾಡಿದವನು ಅದನ್ನು ಕಂಡೇ ತೀರುವನು. ಅಣು ಗಾತ್ರದಷ್ಟು ಕೆಡುಕು ಮಾಡಿದವನು ಅದನ್ನು ಕಂಡೇ ತೀರುವನು" ಎಂದು ಕುರಾನ್ ಪ್ರತಿಪಾದಿಸುತ್ತದೆ.
ಬರೆದವರು-ಸನ್ಮಾರ್ಗಿ

No comments: